ಸಿದ್ದಾಪುರ: ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಗೋಳಿಮಕ್ಕಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 6 ನೇ ವರ್ಷದ ಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಕುಂದಾಪುರದ ಬೈಂದೂರಿನ ಸ್ವಾಮಿ ಕೊರಗಜ್ಜ ತಂಡ ಚ್ಯಾಂಪಿಯನ್ ಆಗಿ ಹೊರಹೊಮ್ಮಿದೆ. ಶ್ರೀ ಗ್ರಾಮದೇವ ಗೆಳೆಯರ ಬಳಗ ಉಡಳ್ಳಿ ಬಿಳೇಗೋಡ ಹಾಗೂ ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಆಯೋಜಿಸಿದ್ದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲೆ ಹಾಗೂ ಅಂತರ ಜಿಲ್ಲೆಯಿಂದ ಒಟ್ಟು 17 ತಂಡಗಳು ಭಾಗವಹಿಸಿದ್ದವು. ಈ ಪೈಕಿ ಕುಂದಾಪುರದ ಬೈಂದೂರಿನ ಸ್ವಾಮೀ ಕೊರಗಜ್ಜ ತಂಡ ಹಾಗೂ ಶ್ರೀ ಗ್ರಾಮದೇವ ಗೆಳೆಯರ ಬಳಗ ತಂಡಗಳು ಫೈನಲ್ ಪ್ರವೇಶಿಸಿದ್ದವು. ಅಂತಿಮವಾಗಿ ಕುಂದಾಪುರದ ಬೈಂದೂರಿನ ಸ್ವಾಮೀ ಕೊರಗಜ್ಜ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ತೃತೀಯ ಬಹುಮಾನ ಹೈಸ್ಕೂಲ್ ಬಾಯ್ಸ್ ಕುಮಟಾ ತಂಡ ಹಾಗೂ ಚತುರ್ಥ ಬಹುಮಾನವನ್ನು ಗ್ರಾಮ ದೇವ ಗೆಳೆಯರ ಬಳಗ ಬಿ ತಂಡ ಪಡೆದುಕೊಂಡಿದೆ.
ಇನ್ನು ಆರಂಭದಲ್ಲಿ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರಾದ ಮಂಜುನಾಥ ಭಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಳೆದ ಆರು ವರ್ಷದಿಂದ ಗ್ರಾಮೀಣ ಕ್ರೀಡೆ ಕಬ್ಬಡ್ಡಿಯನ್ನು ಈ ಭಾಗದಲ್ಲಿ ನಮ್ಮ ಮಕ್ಕಳು ಆಯೋಜನೆ ಮಾಡಿ ಆಡುತ್ತಿರುವುದು ಖುಷಿಯ ವಿಚಾರ. ಕ್ರೀಡೆಯಲ್ಲಿ ಪಾಲ್ಗೊಳ್ಳುವವರು ಉತ್ತಮ ಆಟದೊಂದಿಗೆ ಎಲ್ಲರ ಮನಸ್ಸು ಗೆಲ್ಲಬೇಕು. ಎಲ್ಲರಿಗೂ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ದೊಡ್ಮನೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ ದೊಡ್ಮನೆ ಗ್ರಾಮ ಪಂಚಾಯಿತಿ ಇದೀಗ ಉತ್ತಮ ಕಟ್ಟಡ, ತೆರಿಗೆ ಸಂಗ್ರಹಣೆಯಲ್ಲಿ ಮಾದರಿಯಾಗಿದೆ. ಇತ್ತೀಚೆಗೆ ಪಂಚಾಯಿತಿಗೆ ಭೇಟಿ ನೀಡಿದ ಜಿ.ಪಂ. ಸಿಇಓ ಕೂಡ ಪಂಚಾಯಿತಿಯಲ್ಲಿ ಕೈಗೊಂಡ ಸುಧಾರಣಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆರಿಗೆ ಪಾವತಿಯಲ್ಲಿ ಶೆ.97 ರಷ್ಟು ಸಾಧನೆ ಮಾಡಿದ್ದು ಇನ್ನು ಕೆಲವೆ ದಿನದಲ್ಲಿ ಶೇ. 100 ಸಾಧನೆ ಮಾಡುತ್ತೇನೆ. ಇದಕ್ಕೆಲ್ಲವೂ ಗ್ರಾ.ಪಂ ವ್ಯಾಪ್ತಿಯ ಜನರ ಸಹಕಾರವೇ ಕಾರಣ. ಕಬ್ಬಡ್ಡಿಯಂತಹ ಕ್ರೀಡೆಗಳು ನಮ್ಮಲ್ಲಿ ದೈಹಿಕ ಆರೋಗ್ಯ ಹೆಚ್ಚಿಸುವುದಲ್ಲದೆ ಈ ಕ್ರೀಡಾಕೂಡ ಆಯೋಜನೆ ಯುವ ಪಿಳಿಗೆಗೆ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ದೊಡ್ಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ವಿಘ್ನೇಶ್ವರ ಹೆಗಡೆ, ಸದಸ್ಯ ಬೀರಾ ದ್ಯಾವ ಗೌಡ, ಶಿಕ್ಷಕರಾದ ತಿಪ್ಪಾ ಈರಾ ಗೌಡ, ತಾಲೂಕು ಕರೆ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಅಮ್ಮು ಗೌಡ, ಅನಂತ್ ಗೌಡ, ವಿನಾಯಕ ಗೌಡ, ಗಣಪತಿ ಗೌಡ, ಬೀರಾ ಗೌಡ ಸೇರಿದಂತೆ ಇನ್ನಿತರರು ಇದ್ದರು.
ವಿಸ್ಮಯ ನ್ಯೂಸ್, ಸಿದ್ದಾಪುರ