ಅಂಕೋಲಾ: ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ–ಕುಂಬಾರಕೇರಿ ಪ್ರದೇಶದಲ್ಲಿರುವ ಶ್ರೀ ಮಹಾಲಸಾ ವೆಲ್ಡಿಂಗ್ ಶಾಪ್ನಲ್ಲಿ ಫೆಬ್ರವರಿ 9ರ ಸೋಮವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿರುವ ಘಟನೆ ನಡೆದಿದೆ. ಅಂಕೋಲಾ–ಮಂಜಗುಣಿ ಮುಖ್ಯ ರಸ್ತೆಯಂಚಿನ, ಕುಂಬಾರಕೇರಿ ಕದಂಬೇಶ್ವರ ದೇವಸ್ಥಾನದ ಎದುರಿನ ಅರಳಿ ಕಟ್ಟೆ ಸಮೀಪ ಈ ಅವಘಡ ಸಂಭವಿಸಿದೆ.
ಲಕ್ಷ್ಮೇಶ್ವರದ ಗಂಗಾಧರ ಲಕ್ಷ್ಮೇಶ್ವರ ಅವರಿಗೆ ಸೇರಿದ, ಮನೆಗೆ ಹೊಂದಿಕೊಂಡಿರುವ ಕಟ್ಟಡದಲ್ಲಿ ಸ್ಥಳೀಯ ಯುವಕ ಶೇಖರ ರೋಹಿದಾಸ ನಾಯ್ಕ ಅವರು ಕಳೆದ ಹಲವು ವರ್ಷಗಳಿಂದ ಬಾಡಿಗೆ ಆಧಾರದಲ್ಲಿ ಶ್ರೀ ಮಹಾಲಸಾ ವೆಲ್ಡಿಂಗ್ ಶಾಪ್ ಹೆಸರಿನಲ್ಲಿ ವೆಲ್ಡಿಂಗ್ ಉದ್ಯೋಗ ನಡೆಸುತ್ತಿದ್ದರು. ಸ್ವಂತ ಶ್ರಮದಿಂದ ಉದ್ಯೋಗವನ್ನು ಬೆಳೆಸಿಕೊಂಡು, ಇತರ ಕೆಲವರಿಗೆ ಉದ್ಯೋಗಾವಕಾಶ ಒದಗಿಸುತ್ತಿದ್ದ ಈ ಅಂಗಡಿ, ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ.
ಸೋಮವಾರ ರಾತ್ರಿ ಎಂದಿನಂತೆ ಕೆಲಸ ಮುಗಿಸಿ ಅಂಗಡಿಯನ್ನು ಬಂದ್ ಮಾಡಿ ಮನೆಗೆ ತೆರಳಿದ ಕೆಲವೇ ಹೊತ್ತಿನಲ್ಲಿ, ರಾತ್ರಿ ಸುಮಾರು 10 ಗಂಟೆ ವೇಳೆಗೆ ಅಂಗಡಿಯ ಮೇಲ್ಛಾವಣಿಯಿಂದ ಬೆಂಕಿ ಹೊತ್ತಿಕೊಂಡಿರುವುದು ದಾರಿ ಹೋಕರ ಗಮನಕ್ಕೆ ಬಂದಿದೆ. ಸ್ಥಳೀಯ ಪ್ರಮುಖ ಸಂದೇಶ ನಾಯ್ಕ ಸೇರಿದಂತೆ ದಾರಿ ಹೋಕರು ತಕ್ಷಣ ಕಟ್ಟಡದ ಮಾಲಿಕರು ಹಾಗೂ ಅಂಗಡಿ ಮಾಲಿಕರ ಗಮನಕ್ಕೆ ವಿಷಯ ತಂದಿದ್ದಾರೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ನೀರು ಸುರಿದು ಬೆಂಕಿ ಆರಿಸಲು ಪ್ರಯತ್ನಿಸಿದರಾದರೂ, ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ನಿಯಂತ್ರಣ ಸಾಧ್ಯವಾಗಲಿಲ್ಲ.
ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿ ಸಿಬ್ಬಂದಿಗಳು ಅಗ್ನಿಶಮನ ಕಾರ್ಯಾಚರಣೆ ಆರಂಭಿಸಿದರು. ಆರಂಭದ ಕೆಲ ನಿಮಿಷ ತಾಂತ್ರಿಕ ಅಡಚಣೆ ಕಂಡುಬಂದರೂ, ಅಗ್ನಿಶಾಮಕ ಸಿಬ್ಬಂದಿಗಳು ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆ ಮೆರೆದು ಸುಮಾರು ಅರ್ಧಗಂಟೆಗೂ ಅಧಿಕ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಸಕಾಲದಲ್ಲಿ ನಡೆದ ಕಾರ್ಯಾಚರಣೆಯಿಂದ, ಅಂಗಡಿಯ ಬೆಂಕಿ ಅದೇ ಕಟ್ಟಡಕ್ಕೆ ಹೊಂದಿಕೊಂಡಿರುವ ಮನೆಯ ಮೇಲ್ಛಾವಣಿಗೆ ವ್ಯಾಪಿಸದಂತೆ ತಡೆಯಲು ಸಾಧ್ಯವಾಗಿದ್ದು, ಸಂಭವನೀಯ ಭಾರೀ ಅನಾಹುತ ತಪ್ಪಿದಂತಾಗಿದೆ.
ಈ ಅಗ್ನಿ ಅವಘಡದಲ್ಲಿ ಅಂಗಡಿಯ ಮೇಲ್ಛಾವಣಿಯ ಹೊದಿಕೆ, ಕಟ್ಟಿಗೆ, ಹಲಗೆಗಳು, ರೀಪು, ಪಕಾಶಿ, ಹಂಚುಗಳು ಸುಟ್ಟು ಕರಕಲಾಗಿದ್ದು, ವೆಲ್ಡಿಂಗ್ ಶಾಪ್ನ ಯಂತ್ರೋಪಕರಣಗಳು ಹಾಗೂ ಇತರೆ ಸಾಮಗ್ರಿಗಳು ಗಂಭೀರವಾಗಿ ಹಾನಿಗೊಳಗಾಗಿವೆ. ಘಟನೆಯ ವೇಳೆ ಹೆಸ್ಕಾಂ ಸಿಬ್ಬಂದಿಗಳು ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅಗ್ನಿಶಾಮಕ ಕಾರ್ಯಾಚರಣೆಗೆ ಸಹಕರಿಸಿದರು. ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸುವ್ಯವಸ್ಥೆ ಕಾಪಾಡಿದರು.
ವಿದ್ಯುತ್ ಶಾರ್ಟ್ ಸರ್ಕಿಟ್ನಿಂದಲೇ ಬೆಂಕಿ ಅವಘಡ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಹೆಸ್ಕಾಂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಈ ಅವಘಡದಿಂದಾದ ಒಟ್ಟಾರೆ ಹಾನಿಯ ಪ್ರಮಾಣ ಹಾಗೂ ಬೆಂಕಿಯ ನಿಖರ ಕಾರಣ ಇನ್ನೂ ತಿಳಿದು ಬರಬೇಕಿದೆ.
ಈ ನಡುವೆ, ಕಷ್ಟಪಟ್ಟು ಉದ್ಯೋಗ ನಡೆಸುತ್ತಿದ್ದ ಶೇಖರ ರೋಹಿದಾಸ ನಾಯ್ಕ ಅವರಿಗೆ ಸಂಭವಿಸಿರುವ ಆರ್ಥಿಕ ಹಾಗೂ ವ್ಯವಹಾರಿಕ ನಷ್ಟಕ್ಕೆ, ವಿದ್ಯುತ್ ಶಾರ್ಟ್ ಸರ್ಕಿಟ್ನಿಂದಲೇ ಅವಘಡ ಸಂಭವಿಸಿದ್ದಲ್ಲಿ ಸಂಬಂಧಿತ ಇಲಾಖೆಯಿಂದ ಯೋಗ್ಯ ಪರಿಹಾರ ನೀಡಬೇಕು ಎಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ.
ಗಮನಸೆಳೆದ ಘಟನೆ
ಅವಘಡದ ನಡುವೆ ಅಂಗಡಿಯೊಳಗೆ ಅಳವಡಿಸಿದ್ದ ವಿದ್ಯುತ್ ಪೈಪ್ ಲೈನ್ ಬೆಂಕಿಯ ತೀವ್ರತೆಗೆ ಸುಟ್ಟು ಕರಕಲಾಗಿದ್ದರೂ, ಅದರ ಕೆಳಭಾಗದಲ್ಲಿದ್ದ ಶಿರಸಿ ಮಾರಿಕಾಂಬಾ ದೇವಿಯ ಭಾವಚಿತ್ರಕ್ಕೆ ಯಾವುದೇ ಹಾನಿಯಾಗಿಲ್ಲ. ಅಲ್ಲದೆ ಮೇಲ್ಛಾವಣಿಗೆ ಬೆಂಕಿ ವ್ಯಾಪಿಸಿದ್ದರೂ ಮುಂಭಾಗದಲ್ಲಿ ಅಳವಡಿಸಿದ್ದ ಕೇಸರಿ ಧ್ವಜವೂ ಅಕ್ಷತವಾಗಿರುವುದು, ಸ್ಥಳೀಯ ಭಕ್ತರಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿದೆ. ಸೋಮವಾರದ ದಿನ ಹತ್ತಿರದ ಕದಂಬೇಶ್ವರ ದೇವಸ್ಥಾನದಲ್ಲಿ ಭಜನೆ ಹಾಗೂ ವಿಶೇಷ ಪೂಜೆ ನಡೆದಿದ್ದ ಹಿನ್ನೆಲೆಯಲ್ಲಿ, ದೈವಕೃಪೆಯಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ ಎಂದು ಕೆಲ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ













