ಅಂಕೋಲಾ : ಜನರಿಗೆ ಉನ್ನತ ಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರವಾರದಲ್ಲಿ 100 ಕೋಟಿ ರೂಪಾಯಿ ವೆಚ್ಚದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಜಿಲ್ಲೆಯ ಜನತೆಗೆ ಮಹತ್ವದ ಕೊಡುಗೆಯ ಸಾಧನೆಯಾಗಿದೆ ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಹೇಳಿದರು.
ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಜಿಲ್ಲೆಯ ಅಗತ್ಯತೆ ಕುರಿತು ಮನವರಿಕೆ
ತಾಲೂಕಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಜನರಿಗೆ ವಿಶೇಷ ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದ ಕಳೆದ ಹಲವು ದಶಕಗಳಿಂದಲೂ ಸಂಕಷ್ಟ ಎದುರಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹಲವು ಬಾರಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಜಿಲ್ಲೆಯ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾಗಿ ತಿಳಿಸಿದರು. ಈ ಕುರಿತು ಈ ಹಿಂದೆ ಮಂಜುಗುಣಿ ಗಂಗಾವಳಿ ಸೇತುವೆ ಉದ್ಘಾಟನೆ ಬಳಿಕ ಜಿಲ್ಲಾ ಕೇಂದ್ರಕ್ಕೆ ಬಂದಿದ್ದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಕಾರವಾರ ಕ್ರಿಮ್ಸ್ ಆಸ್ಪತ್ರೆಯಲ್ಲಿ ಅಧಿಕೃತ ಘೋಷಣೆ ಮಾಡಿ ಹೊಸ ಭರವಸೆ ಮೂಡಿಸಿದ್ದರು. ಅಂದು ನುಡಿದಂತೆ ಇಂದು ನಡೆದ ನಮ್ಮ ಸರ್ಕಾರ ಈ ದೀಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಸಿರು ನಿಶಾನೆ ತೋರಿರುವುದರಿಂದ ಜನರ ಬಹುಕಾಲದ ಕನಸು ನನಸಾಗುವ ಹಂತಕ್ಕೆ ಬಂದಿದೆ ಎಂದು ಹೆಮ್ಮೆ ಹಾಗು ಸಂತೋಷ ವ್ಯಕ್ತಪಡಿಸಿದರು.
ಕ್ಷೇತ್ರದ ಜನತೆಯ ಪರವಾಗಿ ಕೃತಜ್ಞತೆ
ಸಾಮಾನ್ಯ ಜನರ ಆರೋಗ್ಯ ಹಿತಾಸಕ್ತಿಯನ್ನು ಗಮನಿಸಿ ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಸಂಬಂಧಿತ ಇಲಾಖೆಗಳ ಸಚಿವರು, ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಕ್ಷೇತ್ರದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಅಂಕೋಲಾ ತಾಲೂಕಿನ ಅಭಿವೃದ್ಧಿಗೆ ಪೂರಕವಾಗುವ ಹಲವು ಯೋಜನೆಗಳನ್ನು ಮುಂದಿರಿಸಲಾಗಿದೆ ಎಂದು ತಿಳಿಸಿದ ಶಾಸಕ ಸೈಲ್, ಗಂಗಾವಳಿ–ಗೋಕರ್ಣ ಸೇತುವೆ ನಿರ್ಮಾಣದ ಬಳಿಕ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದರು. ಅಲಗೇರಿಯ ವಿಮಾನ ನಿಲ್ದಾಣ ಯೋಜನೆ ತಾಲೂಕಿನ ಅಭಿವೃದ್ಧಿಗೆ ಹೊಸ ದಿಕ್ಕು ತೋರಲಿದೆ ಎಂದೂ ಹೇಳಿದರು.
ಶೇಡಿಕುಳಿ ಸಮೀಪ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಪ್ರಯತ್ನ
ಶೇಡಿಕುಳಿ ಸಮೀಪ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದ್ದು, ಜಿಲ್ಲೆಯ ಕ್ರೀಡಾಪಟುಗಳು ಹಾಗೂ ಯುವಕರ ಭವಿಷ್ಯಕ್ಕೆ ಪೂರಕವಾಗುವಂತಹ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳೀಯರು ಯುವಜನತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಭಾವಿಕೇರಿ ಭಾಗದಲ್ಲಿ ಅಣುಸ್ಥಾವರ ನಿರ್ಮಾಣದಂತಹ ಯೋಜನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಸೈಲ್ ಸ್ಪಷ್ಟಪಡಿಸಿದರು.
ಗಂಗಾವಳಿ ನದಿಯಲ್ಲಿ ಮಣ್ಣು ತೆರವಿಗೆ ಹೆಚ್ಚುವರಿ 2.34 ಕೋಟಿ ರೂ. ಬಿಡುಗಡೆ
ಮಳೆಗಾಲದ ಪ್ರವಾಹ ಭೀತಿ ನಿವಾರಣೆಗೆ ಸರ್ಕಾರದ ತ್ವರಿತ ಕ್ರಮ : ಕಳೆದ ಎರಡು ವರ್ಷಗಳ ಹಿಂದೆ ತಾಲೂಕಿನ ಶಿರೂರು ಸಮೀಪ ಸಂಭವಿಸಿದ್ದ ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಅಪಾರ ಪ್ರಮಾಣದ ಮಣ್ಣು, ಕಲ್ಲುಬಂಡೆಗಳು ಜರಿದು ಬಿದ್ದು, ಅದರ ಅಡ್ಡ ಪರಿಣಾಮದ ಸಾಧ್ಯತೆಯಿಂದ ನದಿತೀರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿತ್ತು ಎಂದ ಶಾಸಕ ಸತೀಶ್ ಸೈಲ್,
ಮಳೆಗಾಲದ ಸಂದರ್ಭದಲ್ಲಿ ಕೃತಕ ಪ್ರವಾಹ ಉಂಟಾಗುವ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಹಲವು ಮನವಿಗಳು ಬಂದಿದ್ದವು. ಆರಂಭದಲ್ಲಿ ಮಣ್ಣು ತೆರವು ಕಾರ್ಯಕ್ಕೆ ಮಂಜೂರಾಗಿದ್ದ 2 ಕೋಟಿ ರೂಪಾಯಿ ಅನುದಾನದಲ್ಲಿ ಸಂಪೂರ್ಣ ಕಾಮಗಾರಿ ನಡೆಸುವುದು ಸಾಧ್ಯವಾಗದ ಹಿನ್ನಲೆ ಈ ಕುರಿತು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದ ಬಳಿಕ ಕೇವಲ ಮೂರು ದಿನಗಳಲ್ಲೇ ಸರ್ಕಾರ ಹೆಚ್ಚುವರಿ 2.34 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದು ಜನಪರ ಕಾಳಜಿಯ ಉದಾಹರಣೆಯಾಗಿದೆ ಎಂದರು.
ಕೆಲವೇ ದಿನಗಳಲ್ಲಿ ಮಣ್ಣು ತೆರವು ಕಾರ್ಯ
ಗಂಗಾವಳಿ ನದಿಯ ಮಣ್ಣು ತೆರವು ಕಾರ್ಯ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಇದರಿಂದ ನದಿತೀರದ ಜನರ ಆತಂಕ ನಿವಾರಣೆಯಾಗಲಿದೆ ಎಂದು ಶಾಸಕ ಸೈಲ್ ವಿಶ್ವಾಸ ವ್ಯಕ್ತಪಡಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ













