ಅಂಕೋಲಾ: ಪಟ್ಟಣದ ಕಾರವಾರ ರಸ್ತೆಯಲ್ಲಿರುವ ಪುರಾತನ ಪ್ರಸಿದ್ಧ ಶ್ರೀ ಕಣಕಣೇಶ್ವರ ದೇವಾಲಯವು ಮಹಾಶಿವರಾತ್ರಿ ಪುಣ್ಯಸಂದರ್ಭದಲ್ಲಿ ನೂತನ ಕಂಗೊಳಿಸುವ ರೂಪದಲ್ಲಿ ಕೋಟ್ಯಂತರ ರೂ ಸದ್ವಿನಿಯೋಗದೊಂದಿಗೆ ಲೋಕಾರ್ಪಣೆಗೊಂಡಿತು. ಶಿಖರ ಕಲಶ ಪ್ರತಿಷ್ಠೆ, ನೂತನ ಶಿವಲಿಂಗ ಪ್ರತಿಷ್ಠಾಪನೆ ಹಾಗೂ ವಿವಿಧ ಆಗಮೋಕ್ತ ವೈದಿಕ ವಿಧಿವಿಧಾನಗಳು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಭಾವಪೂರ್ಣವಾಗಿ ನೆರವೇರಿದವು.

ಫೆ 11 ರ ಬುಧವಾರ ಮಧ್ಯಾಹ್ನ ಮೇಷ ಲಗ್ನದ ಶುಭ ನವಾಂಶದಲ್ಲಿ ಬ್ರಾಹ್ಮಣರ ವೇದಮಂತ್ರ ಘೋಷಗಳ ಮಧ್ಯೆ ಶ್ರೀಕಣಕಣೇಶ್ವರ ದೇವರ ನೂತನ ಲಿಂಗದ ಸ್ಥಿರ ಪ್ರತಿಷ್ಠೆ ನೆರವೇರಿತು. ಅಷ್ಟಬಂಧ ಕ್ರಿಯೆಯ ಮೂಲಕ ಲಿಂಗವನ್ನು ಪೀಠದಲ್ಲಿ ಶಾಶ್ವತವಾಗಿ ಪ್ರತಿಷ್ಠಾಪಿಸಲಾಯಿತು. ಬಳಿಕ ಶಿಖರ ಕಲಶ ಪ್ರತಿಷ್ಠೆ, ವಿಹಿತ ಹವನ ಹಾಗೂ ಪೂರ್ಣಾಹುತಿ ನೆರವೇರಿದವು. ಘಂಟಾನಾದ, ಶಂಖನಾದ ಮತ್ತು ‘ಓಂ ನಮಃ ಶಿವಾಯ’ ಓಂ ಕಣಕಣೇಶ್ವರ ಎಂಬ ಜಪಗಳಿಂದ ದೇವಾಲಯದ ವಾತಾವರಣ ದೈವೀ ಸ್ಪಂದನದಿಂದ ಮೆರಗುಗೊಂಡಿತು.
ಕಣಕಣೇಶ್ವರ ಕ್ಷೇತ್ರವು ತಾಲೂಕಿನ ಪ್ರಮುಖ ಹಾಗೂ ಪುರಾತನ ಶಿವಾಲಯಗಳ ಸಾಲಿನಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದು, ನೂರಾರು ವರ್ಷಗಳಿಂದ ಭಕ್ತರ ಆರಾಧನಾ ಕೇಂದ್ರವಾಗಿ ಪ್ರಸಿದ್ಧಿಯಾಗಿದೆ. ಜೀರ್ಣೋದ್ಧಾರ ಕಾರ್ಯದ ಬಳಿಕ ಪಾರಂಪರಿಕ ಶೈಲಿಯಲ್ಲಿ ನಿರ್ಮಿತ ನೂತನ ದೇವಾಲಯವು ಧಾರ್ಮಿಕ ಮಹತ್ವದೊಂದಿಗೆ ಶಿಲ್ಪ, ಕಾಷ್ಟ ಕಲೆಯ ಜೊತೆ ಆಧುನಿಕತೆಯ ಸ್ಪರ್ಶದೊಂದಿಗೆ, ಭವ್ಯವಾಗಿ ನಿರ್ಮಾಣಗೊಂಡು,ಉತ್ತಮ ಒಳಾಂಗಣ ವಿನ್ಯಾಸ ಸಹಿತ, ಸೌಂದರ್ಯ ಮತ್ತು ಧಾರ್ಮಿಕ ವೈಭವವನ್ನು ಪ್ರತಿಬಿಂಬಿಸುತ್ತದೆ. ಲೋಕಾರ್ಪಣೆ ಪ್ರಯುಕ್ತ ಐದು ದಿನಗಳ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ನೂತನ ದೇವಾಲಯದ ಶಿಖರ ಕಲಶವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತರ ಭಜನೆ, ದೀಪಧಾರಣೆ ಮತ್ತು ಧ್ವಜಪತಾಕೆಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ನಡೆಸಿ ಬಳಿಕ ದೇವಾಲಯಕ್ಕೆ ತರಲಾಯಿತು. ನಂತರ ವಿವಿಧ ಹೋಮ–ಹವನ, ರುದ್ರಪಾರಾಯಣ, ಪೂಜಾ ವಿಧಿ ಮತ್ತು ಮಹಾಪೂರ್ಣಾಹುತಿಗಳೊಂದಿಗೆ ದೇವಾಲಯ ಲೋಕಾರ್ಪಣೆಗೊಂಡು ಭವ್ಯ ಶಿವಲಿಂಗ ಪ್ರತಿಷ್ಠಾಪಿಸಲಾಯಿತು.
ದೇವಾಲಯದಿಂದ ಸುಮಂತ್ ಹೆಬ್ಲೆಕರ್ ಅವರಿಗೆ ಸನ್ಮಾನ
ನೂತನ ಶಿವಲಿಂಗವನ್ನು ಮುಂಬೈನ ಎನ್ಪಿಸಿಐಎಲ್ (NPCIL) ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಂತ್ ಶರದ್ ಹೆಬ್ಲೆಕರ್ ಅವರು ತಮ್ಮ ತಾಯಿ ದಿವಂಗತ ಶ್ರೀಮತಿ ಶಾಲಿನಿ ಎಸ್. ಹೆಬ್ಲೆಕರ್ ಅವರ ಸ್ಮರಣಾರ್ಥವಾಗಿ ಭಕ್ತಿಭಾವದಿಂದ ಸಮರ್ಪಿಸಿದ್ದು,
ಈ ಸೇವಾ ಕಾರ್ಯ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳಿಗೆ ಹಾಗೂ ಮಹೋತ್ಸವದ ವೈಭವಕ್ಕೆ ವಿಶೇಷ ಮೆರುಗು ತಂದಿದೆ ಎಂದು ದೇವಸ್ಥಾನ ಮಂಡಳಿ ತಿಳಿಸಿದೆ. ಈ ಮಹತ್ವದ ಕೊಡುಗೆಗಾಗಿ ಸುಮಂತ ಹೆಬ್ಲೆಕರ್ ಅವರನ್ನು ದೇವಸ್ಥಾನದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ದೇವಸ್ಥಾನಕ್ಕೆ ಸಂಬಂಧಿತ ಎಲ್ಲಾ ಮಹಾಕಾರ್ಯದಲ್ಲಿ ಶ್ರೀಕಣಕಣೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ, ಸಾರ್ವಜನಿಕ ಗಣೇಶೋತ್ಸವ ಮಂಡಳಿ, ಅಯ್ಯಪ್ಪಸ್ವಾಮಿ ಭಕ್ತವೃಂದ ಸೇರಿದಂತೆ ನೂರಾರು ಸ್ವಯಂಸೇವಕರು ಸೇವಾಭಾವದಿಂದ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುತ್ತಿದ್ದಾರೆ.
ಫೆ. 12ರಂದು ಗುರುವಾರ ಲಘು ರುದ್ರಹವನ , ಮಹಾಮಂಗಳಾರತಿ – ಅನ್ನಸಂತರ್ಪಣೆ
ಗುರುವಾರ ಲಘು ರುದ್ರಹವನ, ಮಹಾಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನೆರವೇರಲಿದ್ದು, ಮಧ್ಯಾಹ್ನ ಭಕ್ತರಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9 ಗಂಟೆಯಿಂದ ನುರಿತ ಕಲಾವಿದರಿಂದ ‘ಮಹಾಶಕ್ತಿ ಪಂಜುರ್ಲಿ’ ಯಕ್ಷಗಾನ ಪ್ರದರ್ಶನ ಜರುಗಲಿದೆ.
ಮಹಾಶಿವರಾತ್ರಿ ಪುಣ್ಯಕಾಲದಲ್ಲಿ ನೆರವೇರಿದ ಈ ಮಹೋತ್ಸವವು ಕಣಕಣೇಶ್ವರ ಕ್ಷೇತ್ರದ ಧಾರ್ಮಿಕ ಇತಿಹಾಸದಲ್ಲಿ ಮಹತ್ವದ ಘಟ್ಟವಾಗಿ ದಾಖಲಾಗುತ್ತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ












