ಕುಮಟಾ: ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅತ್ಯಂತ ವಿಜೃಂಭಣೆಯಿoದ ನೆರವೇರಿತು. ಉತ್ಸಾಹದಿಂದ ಶಾಲಾ ಅಂಗಳದತ್ತ ಹೆಜ್ಜೆ ಹಾಕಿದ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ, ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಸರಸ್ವತಿ ಪೂಜೆ, ಗಣಹವನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಸಾದ ವಿತರಿಸಿ, ಆಶೀರ್ವದಿಸಲಾಯಿತು.
ಇನ್ನು ಈ ದಿನ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ 2025- 26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ರ್ಯಾಂಕ್ ಗಳಿಸಿದ ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಸಾಮವೇದದ ಹಿರಿಯ ವಿದ್ವಾಂಸರಾದ ವೇದಮೂರ್ತಿ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಶಿಕ್ಷಣ ಇಂದು ವ್ಯಕ್ತಿಯನ್ನು ಸಂಸ್ಕಾರವoತನನ್ನಾಗಿ ರೂಪಿಸುತ್ತದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಶಿಕ್ಷಣ ಪಡೆಯಲು ಒಳ್ಳೆಯ ವಾತಾವರಣ ಕಲ್ಪಿಸಬೇಕು. ಒಳ್ಳೆಯ ಪರಿಸರದಲ್ಲಿ ಬೆಳೆದ ಮಗು ಸಹಜವಾಗಿಯೇ ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಳ್ಳುತ್ತದೆ. ಈ ಶಾಲೆಯ ಮಕ್ಕಳು ಒಳ್ಳೆಯ ಸಾಧನೆ ತೋರಿದ್ದಾರೆ. ಮುಂದೆಯೂ ಸಾಧನೆ ಮಾಡುವಂತಾಗಲಿ. ನಮ್ಮಲ್ಲಿ ನಾನು ಎಂಬ ‘ಅಹಂಕಾರ ‘ ತೊಡೆದು ಹಾಕಿ ‘ನಾವು’ ಎಂಬ ಭಾವ ನೆಲೆಗೊಳ್ಳಬೇಕು. ಆಗ ಮಾತ್ರ ನಾವೆಲ್ಲ ಒಂದಾಗಿ ದೇಶ ಕಟ್ಟಲು ಸಾಧ್ಯ. ಇವೆಲ್ಲವೂ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣವು ‘ಅಮೃತ’ಕ್ಕೆ ಸಮನಾದುದು. ನಮ್ಮಲ್ಲಿರುವ ಸೃಜನಾತ್ಮಕ ಗುಣಗಳಿಂದ ಒಳ್ಳೆಯ ಕಾರ್ಯ ಕೈಗೊಳ್ಳುವಂತೆ ಕರೆ ನೀಡಿದರು.
ಜನರಲ್ಲಿ ಮಾನವೀಯತೆಗಳು ಮರೆಯಾಗಿವೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಜಿ.ಕೆ.ಭಟ್ಟ ಮಾತನಾಡಿ, ನಾವಿಂದು ಆಧುನಿಕ ಯುಗದಲ್ಲಿ ಬದುಕುತ್ತಿದ್ದೇವೆ. ಇಂದಿನ ಅನುಕೂಲತೆಗೆ ತಕ್ಕಂತೆ ಜನರ ಆಸೆ – ಆಕಾಂಕ್ಷೆಗಳು ಬದಲಾಗಿವೆ. ಮಕ್ಕಳಲ್ಲಿ ಮೌಲ್ಯಗಳು, ಜನರಲ್ಲಿ ಮಾನವೀಯತೆಗಳು ಮರೆಯಾಗಿವೆ. ಅತಿಯಾದ ಮೊಬೈಲ್ ಬಳಕೆಯಿಂದಾಗಿ ಕೆಲಸದಲ್ಲಿ ಶ್ರದ್ಧೆ, ಜೀವನದಲ್ಲಿ ನೆಮ್ಮದಿ ಇಲ್ಲವಾಗಿದೆ.
ಆದರೆ ಗ್ರಾಮೀಣ ಭಾಗದಲ್ಲಿ ಸ್ವಲ್ಪಮಟ್ಟಿಗೆ ನೆಮ್ಮದಿ ಕಾಣಬಹುದಾಗಿದೆ. ಇಲ್ಲಿನ ಮಕ್ಕಳು ಉತ್ತಮ ಸಂಸ್ಕಾರ ರೂಢಿಸಿಕೊಂಡಿದ್ದಾರೆ. ಮಕ್ಕಳಲ್ಲಿ ದೇಶಪ್ರೇಮ ಜಾಗೃತವಾಗಲಿ, ಅವರ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಆರ್.ಜಿ.ಭಟ್ಟ ಮಾತನಾಡಿ, ಗ್ರಾಮೀಣ ಭಾಗದ ಈ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಬೇಕಾದ ಅಗತ್ಯ ವಾತಾವರಣವನ್ನು ಅನೂಕೂಲತೆಗಳನ್ನು ಕಲ್ಪಿಸಿದ್ದೇವೆ. ಜೊತೆಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದ್ದೇವೆ. ಇನ್ನೂ ಹೆಚ್ಚಿನ ಮಕ್ಕಳು ಈ ಅವಕಾಶವನ್ನು ಪಡೆದುಕೊಳ್ಳುವಂತಾಗಲಿ ಎಂದು ಆಶಿಸಿ, ಸಾಧನೆಗೈದ ವಿದ್ಯಾರ್ಥಿಗಳನ್ನು, ಶ್ರಮವಹಿಸಿದ ಶಿಕ್ಷಕರನ್ನು ಅಭಿನಂದಿಸಿದರು.
ವೇದಿಕೆಯ ಮೇಲೆ ಶಿಕ್ಷಣ ವಿಭಾಗದ ಸಂಚಾಲಕ ಟಿ.ಆರ್.ಜೋಶಿ, ಕಾರ್ಯದರ್ಶಿ ಗಣೇಶ ಭಟ್ಟ, ಪ್ರಾಚಾರ್ಯ ಎಂ.ಜಿ.ಭಟ್ಟ, ಎಲ್ಲಾ ವಿಭಾಗದ ಮುಖ್ಯಾಧ್ಯಾಪಕರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾನಿಕೇತನ ಸಂಸ್ಥೆಯ ಸದಸ್ಯರು, ಶಿಕ್ಷಕರು,ಪಾಲಕರು, ಊರನಾಗರಿಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ, ಶಾಲೆ, ಶಿಕ್ಷಕರು, ಆಡಳಿತಮಂಡಳಿಯ ಕಾರ್ಯದ ಕುರಿತು ಅಭಿಮಾನದ ನುಡಿಯಾಡಿದರು. ಇದೇ ಸಂದರ್ಭದಲ್ಲಿ ಪೂರ್ವ ವಿದ್ಯಾರ್ಥಿ ಸಂಘದಿoದ ದೇಣಿಗೆಯಾಗಿ ಸಂಗ್ರಹಿಸಿದ ಹಣದಿಂದ ಸ್ಮಾರ್ಟ ಖಿ. ಗಿ ಯನ್ನು ಶಾಲೆಗೆ ನೀಡಲಾಯಿತು. ‘ ಭಾರತ ಸಂಸ್ಕೃತಿ ಪ್ರಕಾಶನ’ ಬೆಂಗಳೂರು ಇವರ ಸನಾತನ ಸಂಸ್ಕೃತಿಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು.
ವಿಸ್ಮಯ ನ್ಯೂಸ್, ಕುಮಟಾ













