- ಏಪ್ರಿಲ್ 25–27ರವರೆಗೆ ವಿಜೃಂಭಣೆಯ ಧಾರ್ಮಿಕ ಮಹೋತ್ಸವ
- ನವಚಂಡಿ ಹವನ, ಪೂರ್ಣಾಹುತಿ, ಅನ್ನಸಂತರ್ಪಣೆ
- ಪಲ್ಲಕಿ ಸಮೇತ ಅಗ್ನಿಪ್ರವೇಶ, ಕೆಂಡದ ಬಸವೇಶ್ವರ ಅಲಂಕೃತ ಬಸವ ಆಗಮನ
- ಭಕ್ತರಿಗೆ ವಿಶೇಷ ಆಶೀರ್ವಾದ
ಅಂಕೋಲಾ: ತಾಲೂಕಿನ ಬಾಳೇಗುಳಿ ಬೊಗ್ರಿಬೈಲಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಉದ್ಭವ ನಾಗಚೌಡೇಶ್ವರಿ ಅಮ್ಮನವರು ಹಾಗೂ ಶ್ರೀ ವೀರಾಂಜನೇಯ ಸ್ವಾಮಿ ದೇವರುಗಳ ಚತುರ್ಥ ವಾರ್ಷಿಕ ವರ್ಧಂತಿ ಉತ್ಸವ ಮತ್ತು ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮವು ಏಪ್ರಿಲ್ 25ರಿಂದ 27ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಏಪ್ರಿಲ್ 25ರಂದು ಶ್ರೀ ಚೌಡೇಶ್ವರಿ ಅಮ್ಮನವರು ಮತ್ತು ಆಂಜನೇಯ ಸ್ವಾಮಿಯ ಪುನರ್ ಪ್ರತಿಷ್ಠಾಪನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ. ಏಪ್ರಿಲ್ 26ರಂದು ಬೆಳಿಗ್ಗೆ ನವಚಂಡಿ ಹವನ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ಹಾಗೂ ದೇವರ ಪೂಜೆ, ಸವಾಲು ಕಾರ್ಯಕ್ರಮಗಳ ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಎಲ್ಲ ಭಕ್ತರು ಪಾಲ್ಗೊಂಡು ಶ್ರೀ ದೇವರ ಅನ್ನ ಪ್ರಸಾದ ಸ್ಪೀಕರಿಸಿ ಪುನೀತರಾಗಲು ಕೋರಲಾಗಿದೆ.
ಉತ್ಸವದ ವಿಶೇಷ ಆಕರ್ಷಣೆ
ಈ ದಿನ ಕರಾವಳಿ ಭಾಗದ ಭಕ್ತರನ್ನು ಹರಸಲು ವಿಶೇಷ ವಾದ್ಯದೊಂದಿಗೆ ಕೆಂಡದ ಬಸವೇಶ್ವರ ಸ್ವಾಮಿಯ ಅಲಂಕೃತ ಬಸವ ಆಗಮಿಸುವುದು ಉತ್ಸವದ ವಿಶೇಷ ಆಕರ್ಷಣೆಯಾಗಲಿದೆ. ಏಪ್ರಿಲ್ 27ರಂದು ಅಮ್ಮನವರ ಗದ್ದುಗೆ ಪೂಜೆ ನಡೆಯಲಿದ್ದು, ಸಂಜೆ ದೇವರುಗಳ ಪಲ್ಲಕಿ ಸಮೇತ ಅಗ್ನಿಪ್ರವೇಶ ಕಾರ್ಯಕ್ರಮ ಭಕ್ತರ ಮನ ಸೆಳೆಯಲಿದೆ.
ಉತ್ಸವದ ಅಂಗವಾಗಿ ದೇವರ ಸನ್ನಿಧಿಯಲ್ಲಿ ವಾದ್ಯಸೇವೆ, ಅನ್ನದಾನ ಸೇವೆ, ಅಲಂಕಾರ ಸೇವೆ, ತುಲಾಭಾರ ಸೇವೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳು ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಊರ ನಾಗರಿಕರು ಹಾಗೂ ದೇವಾಲಯದ ಆಡಳಿತ ಸಮಿತಿಯವರು ಮನವಿ ಮಾಡಿದ್ದಾರೆ.
ಶ್ರೀ ಕ್ಷೇತ್ರವನ್ನು ನಂಬಿ ಬರುವ ಸದ್ಭಕ್ತರಿಗೆ ದೇವರು ಇಷ್ಟಾರ್ಥಗಳನ್ನು ಕರುಣಿಸಿ, ಅವರ ಕುಟುಂಬಗಳಿಗೆ ಆಯುರ್ ಆರೋಗ್ಯ ಮತ್ತು ಸಕಲ ಸೌಭಾಗ್ಯಗಳನ್ನು ನೀಡಲಿ ಎಂದು ಅರ್ಚಕರು ಪ್ರಾರ್ಥಿಸಿದ್ದು, ಎಲ್ಲ ಭಕ್ತರನ್ನು ಚತುರ್ಥ ವರ್ಧಂತಿ ಮಹೋತ್ಸವಕ್ಕೆ ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ












