ಕುಮಟಾ :- ತಾಲೂಕಿನ ಕಲಭಾಗ ಗ್ರಾಮ ನಿವಾಸಿ ಪೂಜಾ ಸಂತೋಷ ನಾಯ್ಕ ಅವರು 2024–26ನೇ ಸಾಲಿನ ಪೋಸ್ಟ್ ಬೇಸಿಕ್ ಬಿ.ಎಸ್.ಸಿ ನರ್ಸಿಂಗ್ (P.B.B.Sc Nursing) ಕೋರ್ಸ್ ಅನ್ನು ಶೇಕಡಾ 72 ಅಂಕಗಳೊಂದಿಗೆ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅಧೀನದಲ್ಲಿ ನಡೆದ ಈ ಕೋರ್ಸ್ನಲ್ಲಿ ವಿಶ್ವವಿದ್ಯಾಲಯ ಮಟ್ಟದ ಪ್ರಥಮ ರ್ಯಾಂಕ್ ಪಡೆದ ಅಭ್ಯರ್ಥಿಗಿಂತ ಕೇವಲ 20 ಅಂಕಗಳಷ್ಟನ್ನು ಮಾತ್ರ ಕಡಿಮೆ ಪಡೆದಿರುವುದು ಇವರ ಗಮನಾರ್ಹ ಸಾಧನೆಯಾಗಿದೆ.
ಮೂಲತಃ ಶಿರಸಿಯ ಗಣೇಶನಗರ ನಿವಾಸಿಗಳಾದ ಟೇಲರಿಂಗ್ ವೃತ್ತಿಯ ರವಿಕಾಂತ ಹಾಗೂ ಶ್ರೀಮತಿ ಕಲಾವತಿ ದಂಪತಿಗಳ ಪುತ್ರಿಯಾಗಿರುವ ಪೂಜಾ ನಾಯ್ಕ ಅವರು ಶಿರಸಿಯಲ್ಲಿ ಪಿ.ಯೂ.ಸಿ.ಮುಗಿಸಿ, 2016 ರಲ್ಲಿ ಹೊನ್ನಾವರದ ಸೆಂಟ್ ಇಗ್ನೇಷಿಯಸ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ನಲ್ಲಿ ಮೂರು ವರ್ಷಗಳ ಜಿ.ಎನ್.ಎಮ್ ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿದ್ದರು.ಅದೇ ವರ್ಷ ಕುಮಟಾ ತಾಲೂಕಿನ ಕಲಭಾಗ ನಿವಾಸಿ ಹಾಗೂ ಟೆಂಪೋ ಮಾಲಕರಾಗಿರುವ ಸಂತೋಷ ಎನ್. ನಾಯ್ಕ ಅವರೊಂದಿಗೆ ವಿವಾಹವಾದರು.
ತಾವು ವಿದ್ಯಾಭ್ಯಾಸ ಮಾಡಿದ ಸಂಸ್ಥೆಯಲ್ಲೇ ಮೂರು ವರ್ಷಗಳ ಕಾಲ ನರ್ಸ್ ಆಗಿ ಸೇವೆ ಸಲ್ಲಿಸಿದ್ದ ಅವರು ಕಳೆದ ಐದು ವರ್ಷಗಳಿಂದ ಕುಮಟಾದ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕರ್ತವ್ಯನಿಷ್ಠೆ, ರೋಗಿಗಳ ಬಗ್ಗೆ ಕಾಳಜಿ ಹಾಗೂ ಸಹೋದ್ಯೋಗಿಗಳೊಂದಿಗೆ ಸೌಹಾರ್ದಯುತ ನಡೆ-ನುಡಿಗಳಿಂದ ಅವರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಗ ‘ಚಿರಂಜೀವಿ’ಯ ಆರೈಕೆ, ಕುಟುಂಬದ ಜವಾಬ್ದಾರಿಗಳು ಹಾಗೂ ನರ್ಸ್ ವೃತ್ತಿಯನ್ನು ಸಮತೋಲನದಿಂದ ನಿಭಾಯಿಸುತ್ತಲೇ ಅವರು ಉಡುಪಿ ಜಿಲ್ಲೆಯ ಕಾಪುವಿನ ವಿದ್ಯಾ ಕಾಲೇಜ್ ಆಫ್ ನರ್ಸಿಂಗ್ ಮೂಲಕ ಬಾಹ್ಯ ಅಧ್ಯಯನದ ಮೂಲಕ ಎರಡು ವರ್ಷಗಳ ಪಿ.ಬಿ.ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿದ್ದಾರೆ.
ಇತ್ತೀಚೆಗೆ ನಡೆದ ಪದವಿ ಪ್ರದಾನೋತ್ಸವದಲ್ಲಿ ಗಣ್ಯರ ಸಮ್ಮುಖದಲ್ಲಿ ಪದವಿ ಪ್ರಮಾಣಪತ್ರವನ್ನು ಸ್ವೀಕರಿಸಿದರು.
ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊಂದಿದ್ದ ಪೂಜಾ ನಾಯ್ಕ ಅವರು ನರ್ಸಿಂಗ್ ಡಿಪ್ಲೊಮಾ ಪೂರೈಸಿದ ಅದೇ ವರ್ಷ ವಿವಾಹವಾದರೂ ತಮ್ಮ ಕನಸನ್ನು ಕೈಬಿಡದೇ ಹತ್ತು ವರ್ಷಗಳ ಬಳಿಕ ನರ್ಸಿಂಗ್ ಪದವಿ ಕೋರ್ಸನ್ನು ಉನ್ನತ ಅಂಕಗಳ ಪಡೆದು ತನ್ನ ಗುರಿಯನ್ನು ಸಾಧಿಸಿರುವುದು ಅವರ ದೃಢ ಸಂಕಲ್ಪಕ್ಕೆ ನಿದರ್ಶನವಾಗಿದೆ.
ತಾಯ್ತನ, ಕುಟುಂಬದ ಜವಾಬ್ದಾರಿ ಹಾಗೂ ನರ್ಸ್ ವೃತ್ತಿಯ ನಡುವೆಯೂ ವಿದ್ಯಾಭ್ಯಾಸ ಮುಂದುವರಿಸಿ ಸಾಧನೆ ಮಾಡಿದ ಪೂಜಾ ನಾಯ್ಕ ಅವರ ಪಯಣ ಇಂದಿನ ಯುವ ಮಹಿಳೆಯರಿಗೆ ಪ್ರೇರಣಾದಾಯಕವಾಗಿದೆ.
ವಿಸ್ಮಯ ನ್ಯೂಸ್, ಕುಮಟಾ













