ಶಿರಸಿ: ಇದು ಯಾವುದೋ ಇತಿಹಾಸದ ಕಟ್ಟು ಕಥೆಯಲ್ಲ.. ಅಕ್ಷರಶಃ ಜೀವ ಕೈಯ್ಯಲ್ಲಿಡಿದು ಸಾಗಿ, ಕುಗ್ರಾಮದ ಕರಾಳ ಕಥೆಗೆ ಸಾಕ್ಷಿಯಾದ ಕಣ್ಣುಗಳ ಅಕ್ಷರ ರೂಪದ ಚಿತ್ರಣವಿದು.. ಶಿರಸಿ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊoಡಿರುವ ಮುಷ್ಕಿ ಸಮೀಪದ ಶಿರಗಣಿ ಗ್ರಾಮದ ರಸ್ತೆಯ ಕಣ್ಣೀರ ಕಥೆಯಿದು. ಶಿರಸಿಯಿಂದ 45 ಕಿ.ಮೀ ದೂರದಲ್ಲಿರುವ ಶಿರಗಣಿ ಗ್ರಾಮದ ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರನ್ನು ಇತ್ತಿಚಿಗೆ ಕಂಬ್ಳಿಯಲ್ಲಿ ಹೊತ್ತೊಯ್ದಿದ್ದ ವಿಷಯ ರಾಜ್ಯಮಟ್ಟದ ಸುದ್ದಿಯಾಗಿತ್ತು.
ಸ್ವಾತಂತ್ರ್ಯ ಪಡೆದು 78 ವರ್ಷದ ಹೊಸ್ತಿಲಲ್ಲಿದ್ದರೂ, ಗ್ರಾಮಾಂತರ ಭಾಗದ ಈ ಕುಗ್ರಾಮ ಮೂಲಭೂತ ಅವಶ್ಯಕತೆಗಳಿಂದ ವಂಚಿತಗೊoಡಿದ್ದು, ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಸುಮಾರು ಏಳರಿಂದ ಎಂಟು ಕಿ.ಮೀಗಳಷ್ಟು ದೂರದಿಂದ ತಮ್ಮ ಅವಶ್ಯಕತೆಗಾಗಿ ಜನರು ನಡೆದು ಸಾಗುವ ಪರಿಸ್ಥಿತಿ ಇಂದಿಗೂ ಇದೆಯೆಂದರೂ ಅದು ಆಡಳಿತ ನಡೆಸುವ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಪ್ರತಿ ಮಳೆಗಾಲದಲ್ಲಿಯೂ ತಮ್ಮ ನರಕಯಾತನೆಯನ್ನು ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಮತ್ತೆ ಮತ್ತೆ ಸೌಲಭ್ಯದಿಂದ ವಂಚಿತರಾಗುವ ಶಿರಗಣಿ ಗ್ರಾಮದ ಗ್ರಾಮಸ್ಥರ ಅನಿಸಿಕೆಯನ್ನು ಅವರಿಂದಲೇ ಕೇಳಬೇಕು. ತಮಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಗ್ರಾಮಸ್ಥರೇ ಎಲ್ಲ ಸೇರಿ ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲಿನವರದ್ದು. ಎಲ್ಲ ಸಮುದಾಯದ ಜನ ಜೊತೆಗೂಡಿ ತಮ್ಮ ಕೈಲಾಗುವ ಸಹಕಾರವನ್ನು ಪರಸ್ಪರ ಮಾಡಿಕೊಳ್ಳುವುದು ಇವರಿಗೆ ನಿತ್ಯದ ಕಾಯಕ.
ತಮ್ಮೂರಿನ ರಸ್ತೆಯನ್ನು ಸರಿಪಡಿಸಲು ಕಳೆದ ನಲವತ್ತು, ಐವತ್ತು ವರ್ಷಗಳಿಂದ ಕಲ್ಲು, ಜಲ್ಲಿ ಹೊತ್ತಿದ್ದ ಶಿರಗಣಿ ಗ್ರಾಮದ ವೃದ್ಧರು ಇಂದು 97 ರ ಇಳಿ ವಯಸ್ಸಿನಲ್ಲಿ ಹಾಸಿಗೆಯಲ್ಲಿ ಅಂತಿಮ ದಿನವನ್ನು ಎಣಿಸುತ್ತಿದ್ದಾರೆ. ಆದರೆ ಅವರ ಅನಾರೋಗ್ಯದ ಸಮಯದಲ್ಲಿಯೂ ಅವರನ್ನು ಕಂಬ್ಳಿಯಲ್ಲಿ ಹೊತ್ತೊಯ್ಯುವ ಪರಿಸ್ಥಿತಿ ಇಂದಿಗೂ ಇರುವುದು ದುರದೃಷ್ಟಕರವಾಗಿದೆ.
ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಸಹ ನಮ್ಮ ಪಕ್ಕಸಲ್ಲಿಯೇ ಇಂತಹ ಪರಿಸ್ಥಿತಿ ಇರುವ ಊರನ್ನು ನೋಡಿದರೆ ಸರಕಾರದ ಆಡಳುತ ವ್ಯವಸ್ಥೆ ಬದುಕಿದೆಯಾ, ಸತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ಈ ಕೂಡಲೇ ಶಾಸಕರಾದ ಭೀಮಣ್ಣನವರು ಅಧಿಕಾರಿಗಳ ಜೊತೆಗೆ ಈ ಗ್ರಾಮಕ್ಕೆ ಭೇಟಿ ನೀಡಿ, ರಸ್ತೆಯನ್ನು ಸರಿಪಡಿಸಿಕೊಡಬೇಕು. ಇಲ್ಲವಾದಲ್ಲಿ ಊರಿನ ಗ್ರಾಮಸ್ಥರ ಪರವಾಗಿ, ಅವರ ಜೊತೆಯಾಗಿ ನಿಮ್ಮ ಕಛೇರಿಯೆದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಾಗುವುದು. ಈ ರಸ್ತೆ ಸಮಸ್ಯೆ ಬಗರಹರಿಯುವವರೆಗೂ ನಾನು ಈ ಊರಿನ ಜೊತೆಗೆ, ಜನರೊಡನೆ ಗಟ್ಟಿಯಾಗಿ ಇರುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಎಚ್ಚರಿಸಿದ್ದಾರೆ.
ವಿಸ್ಮಯ ನ್ಯೂಸ್, ಶಿರಸಿ











