ಅಂಕೋಲಾ : ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ಕುಂಬಾರಕೇರಿ ನಿವಾಸಿ, ಪ್ರಶಾಂತ (ಪಚ್ಚು ) ಕೆ ನಾಯ್ಕ (43) ನಿಧನನಾಗಿದ್ದಾನೆ. ಇತ್ತೀಚೆಗೆ ಕಾಡಿದ್ದ ಅನಾರೋಗ್ಯ ಸಮಸ್ಯೆಯಿಂದ ಮೊದಲು ಅವನನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಈ ನಡುವೆ ಒಮ್ಮೆ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದ ಈತನನ್ನು, ತದನಂತರ ಮತ್ತೆ ಅದೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತಾದರೂ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಬೆಳಗಿನ ಜಾವದಲ್ಲಿ ಕೊನೆಯುಸಿರೆಳೆದಿದ್ದಾನೆ.
ತಾಲೂಕಿನ ಹೆಸರಾಂತ ಫೋಟೋ ಸ್ಟುಡಿಯೋ ಒಂದರಲ್ಲಿ ಸಹಾಯಕನಾಗಿ ಅತ್ಯುತ್ತಮ ಫೋಟೋಗ್ರಾಫರ್ ಎನಿಸಿಕೊಂಡಿದ್ದ ಪ್ರಶಾಂತ ನಾಯ್ಕ,ತನ್ನ ಆತ್ಮೀಯ ವಲಯದಲ್ಲಿ ಪಚ್ಚು ಎಂದೇ ಚಿರ ಪರಿಚಿತನಾಗಿದ್ದ.ಊರಿನ ಹಾಗೂ ಸುತ್ತಮುತ್ತಲ ಅನೇಕ ಕಡೆಯ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ ಮತ್ತಿತರ ಕಾರ್ಯಗಳಲ್ಲಿಯೂ ತನ್ನ ಕೈಲಾದ ಸಹಕಾರ ಸೇವೆ ನೀಡುತ್ತಾ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದ. ತನ್ನ ಹಾಸ್ಯ ಮಿಶ್ರಿತ ಶೈಲಿಯ ಮಾತುಗಾರಿಕೆ ಮೂಲಕ ತನ್ನ ನೋವು ಹಾಗೂ ಸಂಕಟ ಮರೆತು ಇತರರನ್ನು ನಗಿಸುತ್ತಿದ್ದ. ಕೆಲ ತುರ್ತು ಸಂದರ್ಭಗಳಲ್ಲಿ ಇತರರ ಪಾಲಿಗೆ ಆಪತ್ಬಾಂಧವನಂತಿದ್ದ ಪಚ್ಚು , ತನ್ನ ತಂದೆ, ತಾಯಿ, ಸಹೋದರ , ಸಹೋದರಿಯರು ಸೇರಿದಂತೆ ಕುಟುಂಬ ವರ್ಗ ಸೇರಿದಂತೆ ಅಪಾರ ಬಂಧು ಬಳಗ, ಮತ್ತು ಗೆಳೆಯರ ಬಳಗ ತೊರೆದಿದ್ದು , ಆತನ ಅಗಲುವಿಕೆ ನೋವು ಕೇವಲ ಕುಟುಂಬಕ್ಕಷ್ಟೇ ಅಲ್ಲದೇ ಊರಿನಲ್ಲಿ ಮತ್ತು ಗೆಳೆಯರ ಬಳಗದಲ್ಲಿ ಶೋಕದ ವಾತಾವರಣ ಮೂಡಿಸಿದೆ.
ಶಾಸಕ ಸತೀಶ ಸೈಲ್ ಸೇರಿದಂತೆ ತಾಲೂಕಿನ ಕೆಲಗಣ್ಯರು,ಸಮಾಜದ ಹಾಗೂ ಊರಿನ ಪ್ರಮುಖರು ,ಗೆಳೆಯರ ಬಳಗ ಮತ್ತಿತರರು ಪಚ್ಚು ಅಕಾಲಿಕ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಶ್ರೀ ದೇವರು ,ಅವನ ಕುಟುಂಬಕ್ಕೆ ಅಗಲುವಿಕೆಯ ದುಃಖ ಸಹಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. ಮಂಗಳೂರಿನಿಂದ ಮೃತ ದೇಹವನ್ನು ಮನೆಗೆ ತರಲಾಗುತ್ತಿದ್ದು, ಇಂದು ( ಮಾ 20 ರ ಶುಕ್ರವಾರ) ಮಧ್ಯಾಹ್ನ 1 – 15 ರ ನ ನಂತರ ತಲುಪುವ ನಿರೀಕ್ಷೆ ಇದೆ. ಬಳಿಕ ಕೋಟೆವಾಡದ ಹಿಂದೂ ಸ್ಮಶಾನ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ











