ಕುಮಟಾ: ವಿಜ್ಞಾನ ಎನ್ನುವುದು ಜಗತ್ತಿಗೆ ಬೆಳಕು ನೀಡಿದ ಒಂದು ವಿಚಾರ ಕ್ರಮ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಹಿಂದಿನ ಅಗತ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಶಾಲೆಗಳು ಕಾರ್ಯನಿರ್ವಹಿಸಬೇಕು ಎಂದು ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪನ್ಮೂಲ ವ್ಯಕ್ತಿ, ವಿಧಾತ್ರಿ ಅಕಾಡೆಮಿಯ ವಿಕ್ಕಿ ವಾಸ್ವಾನಿ ಹೇಳಿದರು. ಅವರು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾಕೇಂದ್ರದಲ್ಲಿ ನಡೆದ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ, ಕಾರ್ಯನಿರ್ವಹಿಸುವ ವಿಜ್ಞಾನ ಪರಿಕರಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಎಳೆವೆಯಲ್ಲಿಯೇ ವಿದ್ಯಾರ್ಥಿಗಳಿಗೆ ವಿಜ್ಞಾನದ ಕುರಿತಾಗಿ ಆಸಕ್ತಿ ಬೆಳೆಸಬೇಕು. ಇಂತಹ ಕಾರ್ಯ ಮಾಡುವುದು ಪ್ರಸ್ತುತ ಸಮಾಜದ ಅಗತ್ಯತೆಯಾಗಿದೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಅವುಗಳಿಗೆ ಸೂಕ್ತ ವ್ಯವಸ್ಥೆ ಇರುತ್ತದೆ. ಆದರೆ ಕುಮಟಾದಂತಹ ಸ್ಥಳದಲ್ಲಿ ಇರುವ ಸಂಪನ್ಮೂಲಗಳ ಬಳಕೆಯನ್ನೇ ಮಾಡಿಕೊಂಡು ಇಷ್ಟು ಅತ್ಯುತ್ತಮವಾಗಿ, ಈ ರೀತಿಯಾದ ವಿಜ್ಞಾನ ದಿನವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸಾಪ್ಟವೇರ್ ಇಂಜಿನಿಯರ್ ರಾಮಪ್ರಸನ್ನ ಖಾರ್ವಿ ಮಾತನಾಡಿ, 1928 ರ ಫೆಬ್ರವರಿ 28 ರಂದು ಮಹಾನ್ ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರು ವಿಶ್ವ ಪ್ರಸಿದ್ಧವಾದ ರಾಮನ್ ಎಫೆಕ್ಟ ಅನ್ನು ಜಗತ್ತಿಗೆ ಬಹಿರಂಗ ಪಡಿಸಿದರು. ಈ ದಿನವನ್ನು ಇಷ್ಟು ವಿಭಿನ್ನವಾಗಿ ಹಮ್ಮಿಕೊಂಡು ಸಂಸ್ಥೆ ವಿದ್ಯಾರ್ಥಿಗಳ ಭವಿಷ್ಯತ್ತಿಗೆ ಮುನ್ನುಡಿ ಬರೆದಿದೆ. ವಿಜ್ಞಾನ ಎಂದರೆ ಇರುವುದನ್ನು ಹೊಸ ದೃಷ್ಟಿಕೋನದಲ್ಲಿ ನೋಡುವ ವ್ಯವಸ್ಥೆಯಾಗಿದೆ. ವಿದ್ಯಾರ್ಥಿಗಳು ವೈವಿಧ್ಯಮಯವಾದ ವೈಜ್ಞಾನಿಕ ಪರಿಕರಗಳನ್ನು ತಯಾರಿಸಿದ್ದು, ಅವರ ಮುಂದಿನ ಬದುಕಿಗೆ ಅದು ಮಾರ್ಗದರ್ಶಿಯಾಗಲಿದೆ. ಹೊಸದನ್ನು ಕಂಡುಹಿಡಿಯುವ ಹಂಬಲವೇ ವಿಜ್ಞಾನ ಬೆಳೆಯಲು ಕಾರಣವಾಗಿದೆ ಹೀಗಾಗಿ ವಿದ್ಯಾರ್ಥಿಗಳು ಹೊಸ ಹೊಸ ಪ್ರಯೋಗಗಳನ್ನು ಪ್ರಯತ್ನಗಳನ್ನು ಮಾಡುತ್ತ ಸಾಗಬೇಕು. ಇದಕ್ಕೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಬಲ ತುಂಬಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದಾತ್ರಿ ಅಕಾಡೆಮಿಯ ಸಹಯೋಗದ ಸರಸ್ವತಿ ಪಿಯು ಕಾಲೇಜಿನ ಉಪನ್ಯಾಸಕ ಪ್ರಸನ್ನ ಹೆಗಡೆ ವಿದ್ಯಾರ್ಥಿಗಳಿಗೆ ಪ್ರಯೋಗಗಳ ಮೂಲಕ ವಿಜ್ಞಾನದ ವಿಸ್ಮಯ ತೋರಿಸಿ, ಈ ಮೂಲಕ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಕಾರ್ಯ ಮಾಡಿದರು. ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಸ್ಮಾರ್ಟ ಅಂಬ್ಯುಲೆನ್ಸ್, ರೇನ್ ಸೆನ್ಸಾರ್, ಭೂಕಂಪ ಅಲಾರಾಂ, ಹೋಲೋಗ್ರಾಮ್, ಲೈಟ್ ಫೆಡಿಲಿಟಿ, ಆಟೋಮಿಕ್ ವಾಟರ್ ಫಂಕ್ಷನ್, ಸ್ಮಾರ್ಟ ಸಿಟಿಯಂತಹ ಹಲವಾರು ವೈವಿದ್ಯಮಯ ಹಾಗೂ ಕ್ರಿಯಾಶೀಲ ವಿಜ್ಞಾನ ಮಾದರಿ ತಯಾರಿಸಿ ತಂದು ಗಮನ ಸೆಳೆದರು. ಮುಖ್ಯೋಪಾಧ್ಯಾಯ ಗಣೇಶ ಜೋಶಿ ಸಂಕೊಳ್ಳಿ ಸ್ವಾಗತಿಸಿ, ಪ್ರಾಸ್ಥಾವಿಕ ನುಡಿಗಳನ್ನು ಆಡಿದರು. ಶಿಕ್ಷಕರ ಗೌರೀಶ ಭಂಡಾರಿ ನಿರೂಪಿಸಿದರು. ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ ವಂದಿಸಿದರು. ವಿಜ್ಞಾನ ಶಿಕ್ಷಕರಾದ ಉಷಾ ಭಟ್ಟ, ಪ್ರಜ್ಞಾ ನಾಯ್ಕ, ಶೃತಿ ಪೆಡ್ನೇಕರ್, ವೈಭವಕುಮಾರ್ ಎಚ್ ಇದ್ದರು.
ವಿಸ್ಮಯ ನ್ಯೂಸ್, ಕುಮಟಾ