Big News

ಬೆಂಕಿ ಅವಘಡದಲ್ಲಿ ಅಪಾರಹಾನಿ: ಆದರೆ, ಮಾರಿಕಾಂಬೆಯ ಫೋಟೋ ಮಾತ್ರ ಸೇಫ್

Share

ಅಂಕೋಲಾ: ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ–ಕುಂಬಾರಕೇರಿ ಪ್ರದೇಶದಲ್ಲಿರುವ ಶ್ರೀ ಮಹಾಲಸಾ ವೆಲ್ಡಿಂಗ್ ಶಾಪ್ನಲ್ಲಿ ಫೆಬ್ರವರಿ 9ರ ಸೋಮವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿರುವ ಘಟನೆ ನಡೆದಿದೆ. ಅಂಕೋಲಾ–ಮಂಜಗುಣಿ ಮುಖ್ಯ ರಸ್ತೆಯಂಚಿನ, ಕುಂಬಾರಕೇರಿ ಕದಂಬೇಶ್ವರ ದೇವಸ್ಥಾನದ ಎದುರಿನ ಅರಳಿ ಕಟ್ಟೆ ಸಮೀಪ ಈ ಅವಘಡ ಸಂಭವಿಸಿದೆ.

ಲಕ್ಷ್ಮೇಶ್ವರದ ಗಂಗಾಧರ ಲಕ್ಷ್ಮೇಶ್ವರ ಅವರಿಗೆ ಸೇರಿದ, ಮನೆಗೆ ಹೊಂದಿಕೊಂಡಿರುವ ಕಟ್ಟಡದಲ್ಲಿ ಸ್ಥಳೀಯ ಯುವಕ ಶೇಖರ ರೋಹಿದಾಸ ನಾಯ್ಕ ಅವರು ಕಳೆದ ಹಲವು ವರ್ಷಗಳಿಂದ ಬಾಡಿಗೆ ಆಧಾರದಲ್ಲಿ ಶ್ರೀ ಮಹಾಲಸಾ ವೆಲ್ಡಿಂಗ್ ಶಾಪ್ ಹೆಸರಿನಲ್ಲಿ ವೆಲ್ಡಿಂಗ್ ಉದ್ಯೋಗ ನಡೆಸುತ್ತಿದ್ದರು. ಸ್ವಂತ ಶ್ರಮದಿಂದ ಉದ್ಯೋಗವನ್ನು ಬೆಳೆಸಿಕೊಂಡು, ಇತರ ಕೆಲವರಿಗೆ ಉದ್ಯೋಗಾವಕಾಶ ಒದಗಿಸುತ್ತಿದ್ದ ಈ ಅಂಗಡಿ, ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ.

ಸೋಮವಾರ ರಾತ್ರಿ ಎಂದಿನಂತೆ ಕೆಲಸ ಮುಗಿಸಿ ಅಂಗಡಿಯನ್ನು ಬಂದ್ ಮಾಡಿ ಮನೆಗೆ ತೆರಳಿದ ಕೆಲವೇ ಹೊತ್ತಿನಲ್ಲಿ, ರಾತ್ರಿ ಸುಮಾರು 10 ಗಂಟೆ ವೇಳೆಗೆ ಅಂಗಡಿಯ ಮೇಲ್ಛಾವಣಿಯಿಂದ ಬೆಂಕಿ ಹೊತ್ತಿಕೊಂಡಿರುವುದು ದಾರಿ ಹೋಕರ ಗಮನಕ್ಕೆ ಬಂದಿದೆ. ಸ್ಥಳೀಯ ಪ್ರಮುಖ ಸಂದೇಶ ನಾಯ್ಕ ಸೇರಿದಂತೆ ದಾರಿ ಹೋಕರು ತಕ್ಷಣ ಕಟ್ಟಡದ ಮಾಲಿಕರು ಹಾಗೂ ಅಂಗಡಿ ಮಾಲಿಕರ ಗಮನಕ್ಕೆ ವಿಷಯ ತಂದಿದ್ದಾರೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ನೀರು ಸುರಿದು ಬೆಂಕಿ ಆರಿಸಲು ಪ್ರಯತ್ನಿಸಿದರಾದರೂ, ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ನಿಯಂತ್ರಣ ಸಾಧ್ಯವಾಗಲಿಲ್ಲ.

ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿ ಸಿಬ್ಬಂದಿಗಳು ಅಗ್ನಿಶಮನ ಕಾರ್ಯಾಚರಣೆ ಆರಂಭಿಸಿದರು. ಆರಂಭದ ಕೆಲ ನಿಮಿಷ ತಾಂತ್ರಿಕ ಅಡಚಣೆ ಕಂಡುಬಂದರೂ, ಅಗ್ನಿಶಾಮಕ ಸಿಬ್ಬಂದಿಗಳು ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆ ಮೆರೆದು ಸುಮಾರು ಅರ್ಧಗಂಟೆಗೂ ಅಧಿಕ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಸಕಾಲದಲ್ಲಿ ನಡೆದ ಕಾರ್ಯಾಚರಣೆಯಿಂದ, ಅಂಗಡಿಯ ಬೆಂಕಿ ಅದೇ ಕಟ್ಟಡಕ್ಕೆ ಹೊಂದಿಕೊಂಡಿರುವ ಮನೆಯ ಮೇಲ್ಛಾವಣಿಗೆ ವ್ಯಾಪಿಸದಂತೆ ತಡೆಯಲು ಸಾಧ್ಯವಾಗಿದ್ದು, ಸಂಭವನೀಯ ಭಾರೀ ಅನಾಹುತ ತಪ್ಪಿದಂತಾಗಿದೆ.

ಈ ಅಗ್ನಿ ಅವಘಡದಲ್ಲಿ ಅಂಗಡಿಯ ಮೇಲ್ಛಾವಣಿಯ ಹೊದಿಕೆ, ಕಟ್ಟಿಗೆ, ಹಲಗೆಗಳು, ರೀಪು, ಪಕಾಶಿ, ಹಂಚುಗಳು ಸುಟ್ಟು ಕರಕಲಾಗಿದ್ದು, ವೆಲ್ಡಿಂಗ್ ಶಾಪ್‌ನ ಯಂತ್ರೋಪಕರಣಗಳು ಹಾಗೂ ಇತರೆ ಸಾಮಗ್ರಿಗಳು ಗಂಭೀರವಾಗಿ ಹಾನಿಗೊಳಗಾಗಿವೆ. ಘಟನೆಯ ವೇಳೆ ಹೆಸ್ಕಾಂ ಸಿಬ್ಬಂದಿಗಳು ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅಗ್ನಿಶಾಮಕ ಕಾರ್ಯಾಚರಣೆಗೆ ಸಹಕರಿಸಿದರು. ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸುವ್ಯವಸ್ಥೆ ಕಾಪಾಡಿದರು.

ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಲೇ ಬೆಂಕಿ ಅವಘಡ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಹೆಸ್ಕಾಂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಈ ಅವಘಡದಿಂದಾದ ಒಟ್ಟಾರೆ ಹಾನಿಯ ಪ್ರಮಾಣ ಹಾಗೂ ಬೆಂಕಿಯ ನಿಖರ ಕಾರಣ ಇನ್ನೂ ತಿಳಿದು ಬರಬೇಕಿದೆ.

ಈ ನಡುವೆ, ಕಷ್ಟಪಟ್ಟು ಉದ್ಯೋಗ ನಡೆಸುತ್ತಿದ್ದ ಶೇಖರ ರೋಹಿದಾಸ ನಾಯ್ಕ ಅವರಿಗೆ ಸಂಭವಿಸಿರುವ ಆರ್ಥಿಕ ಹಾಗೂ ವ್ಯವಹಾರಿಕ ನಷ್ಟಕ್ಕೆ, ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಲೇ ಅವಘಡ ಸಂಭವಿಸಿದ್ದಲ್ಲಿ ಸಂಬಂಧಿತ ಇಲಾಖೆಯಿಂದ ಯೋಗ್ಯ ಪರಿಹಾರ ನೀಡಬೇಕು ಎಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ.

ಗಮನಸೆಳೆದ ಘಟನೆ

ಅವಘಡದ ನಡುವೆ ಅಂಗಡಿಯೊಳಗೆ ಅಳವಡಿಸಿದ್ದ ವಿದ್ಯುತ್ ಪೈಪ್ ಲೈನ್ ಬೆಂಕಿಯ ತೀವ್ರತೆಗೆ ಸುಟ್ಟು ಕರಕಲಾಗಿದ್ದರೂ, ಅದರ ಕೆಳಭಾಗದಲ್ಲಿದ್ದ ಶಿರಸಿ ಮಾರಿಕಾಂಬಾ ದೇವಿಯ ಭಾವಚಿತ್ರಕ್ಕೆ ಯಾವುದೇ ಹಾನಿಯಾಗಿಲ್ಲ. ಅಲ್ಲದೆ ಮೇಲ್ಛಾವಣಿಗೆ ಬೆಂಕಿ ವ್ಯಾಪಿಸಿದ್ದರೂ ಮುಂಭಾಗದಲ್ಲಿ ಅಳವಡಿಸಿದ್ದ ಕೇಸರಿ ಧ್ವಜವೂ ಅಕ್ಷತವಾಗಿರುವುದು, ಸ್ಥಳೀಯ ಭಕ್ತರಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿದೆ. ಸೋಮವಾರದ ದಿನ ಹತ್ತಿರದ ಕದಂಬೇಶ್ವರ ದೇವಸ್ಥಾನದಲ್ಲಿ ಭಜನೆ ಹಾಗೂ ವಿಶೇಷ ಪೂಜೆ ನಡೆದಿದ್ದ ಹಿನ್ನೆಲೆಯಲ್ಲಿ, ದೈವಕೃಪೆಯಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ ಎಂದು ಕೆಲ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಜೂನ್ 14 ರಂದು ಚುಟುಕು ಸಾಹಿತ್ಯ ಸಮ್ಮೇಳನ

ಕುಮಟಾ: ಉತ್ತರ ಕನ್ನಡ ಜಿಲ್ಲಾಮಟ್ಟದ 9 ನೇ ಹಾಗೂ ಕುಮಟಾ ತಾಲೂಕಾ 5ನೇ ಚುಟುಕು ಸಾಹಿತ್ಯ ಸಮ್ಮೇಳನವು ಇದೇ ಜೂನ್ 14 ರ ಭಾನುವಾರದಂದು ಕುಮಟಾದ ಲಕ್ಷ್ಮೀಬಾಯಿ ಬುರ್ಡೇಕರ್ ಸಭಾಂಗಣದಲ್ಲಿ ನಡೆಯಲಿದೆ....

ಪ್ರಸಿದ್ಧ ಕಣ್ಣಿನ ಆಸ್ಪತ್ರೆಯಲ್ಲಿ ಉದ್ಯೋಗಾವಕಾಶ: Job Alert

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾದ ಹೆಗಡೆ ಐ ಫೌಂಡೇಷನ್ / ಹೆಗಡೆ ಆಪ್ಟಿಕಲ್ಸ್, ಭಟ್ಕಳ ಹಾಗೂ ಹೊನ್ನಾವರದಲ್ಲಿ ಸುಸಜ್ಜಿತ ಆಸ್ಪತ್ರೆಗಳನ್ನು ಹೊಂದಿದ್ದು, ಇದೀಗ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಸ್ವಾತಂತ್ರ‍್ಯೋತ್ಸವದ ಸಂಭ್ರಮಕ್ಕೆ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಭರ್ಜರಿ ಆಫರ್; ಶೇ.70ರಷ್ಟು ರಿಯಾಯಿತಿ

ಕುಮಟಾ: ಸ್ವಾತಂತ್ರ‍್ಯೋತ್ಸವದ ಅಂಗವಾಗಿ ತರಂಗ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ ಗ್ರಾಹಕರಿಗಾಗಿ ವಿಶೇಷ ‘ಫ್ರೀಡಂ ಫೆಸ್ಟಿವಲ್’ ಆಫರ್...

ಜೂನ್ 14 ರಂದು ಚುಟುಕು ಸಾಹಿತ್ಯ ಸಮ್ಮೇಳನ

ಕುಮಟಾ: ಉತ್ತರ ಕನ್ನಡ ಜಿಲ್ಲಾಮಟ್ಟದ 9 ನೇ ಹಾಗೂ ಕುಮಟಾ ತಾಲೂಕಾ 5ನೇ ಚುಟುಕು ಸಾಹಿತ್ಯ...

ಜಾನುವಾರು ರಕ್ಷಣೆ: ಗೋ ಶಾಲೆಗೆ ರವಾನಿಸುವ ಮೂಲಕ ಗೀರ್ ಹೋರಿಗಳಿಗೆ ಜೀವದಾನ

ಅಂಕೋಲಾ: ವಧೆ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ, ಎರಡು ಭಾರೀ ಗಾತ್ರದ ಗೀರ್ ತಳಿಯ ಹೋರಿಗಳಿಗೆ ಕೊನೆಗೂ...

ಮುರಿನಕಟ್ಟೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಕಾಗೇರಿ ಆಗ್ರಹ

ಭಟ್ಕಳ:ಮುರಿನಕಟ್ಟೆ ವಿಚಾರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹಿಂದೂಗಳ ಭಾವನೆಗಳಿಗೆ ಸಂಬAಧಿಸಿದ ವಿಷಯವಾಗಿದ್ದು, ಕೆಲ ಮತಾಂಧ...

ಅಳ್ವೆಕೋಡಿ ಕಪ್ಪೆಚಿಪ್ಪು ದುರಂತ: ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ಕಾಗೇರಿ

ಭಟ್ಕಳ: ತಾಲೂಕಿನ ಅಳ್ವೆಕೋಡಿಯ ಕಪ್ಪೆಚಿಪ್ಪು ದುರಂತದಲ್ಲಿ ಸಾವನ್ನಪ್ಪಿದ ಕುಟುಂಬದವರನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ...

ಜಿಲ್ಲೆಯ ಆರೋಗ್ಯ ಸೇವೆಗೆ ಐತಿಹಾಸಿಕ ಹೆಜ್ಜೆ : ಶಾಸಕ ಸತೀಶ್ ಸೈಲ್

ಅಂಕೋಲಾ : ಜನರಿಗೆ ಉನ್ನತ ಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರವಾರದಲ್ಲಿ 100 ಕೋಟಿ...

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಶಿಕ್ಷಕರು ಬೇಕಾಗಿದ್ದಾರೆ

ಕುಮಟಾ : ಅಂಕೋಲಾದ ಕೆನರಾ ವೆಲ್ಫೇರ್ ಟ್ರಸ್ಟ್ ನ ಕುಮಟಾ ಧಾರೇಶ್ವರದ ದಿನಕರ ಇಂಗ್ಲಿಷ್ ಮೀಡಿಯಂ...

ಅಲಂಕಾರ ಜ್ಯುವೆಲ್ಲರ್ಸ್ : ಅಕ್ಷಯ ತೃತೀಯ ವಿಶೇಷ ಆಫರ್

ಸುವರ್ಣ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿ : ಈ ಶುಭ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಮತ್ತು...